ಕೆಲ ದಶಕಗಳ ಹಿಂದೆ ಮೂಡಿಬಂದ ಬಂಗಾರದ ಮನುಷ್ಯ ಎಂಬ ಚಲನಚಿತ್ರದಿಂದ ಪ್ರಭಾವಿತರಾಗಿ ಅದೇಷ್ಟೂ ಯುವಕರು ತಮ್ಮ ಹಳ್ಳಿಗಳಿಗೆ ತೆರಳಿ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡರು ಎಂದು ಅನೇಕ ಸಲ ಕೇಳಿದ್ದೇವೆ, ಆ ಚಲನಚಿತ್ರದ ಪರಿಣಾಮ ಹಾಗಿತ್ತೆಂದರೆ ತಪ್ಪಾಗಲಿಕಿಲ್ಲ.
ಮತ್ತೂಂದೆಡೆ ಒಂದು ಸಮುದಾಯ ತಮ್ಮನ್ನು ತಾವು ಶೋಷಣೆಮುಕ್ತವಾಗುವಲ್ಲಿ ಹಾಗು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಸ್ವಪ್ರಯತ್ನದ ನೈಜ ಘಟನೆಯು ಒಬ್ಬ ಚಲನಚಿತ್ರ ನಿರ್ದೇಶಕನಿಗೆ ಪ್ರಭಾವ ಬೀರಿ ತಯಾರಾದ ಚಿತ್ರವೆ ಮಂಥನ್,
ಈ ಎರಡು ಚಲನಚಿತ್ರಗಳು ಸಾರಿದ ಸಮಾನ ಸಂದೇಶ ಎಂದರೆ ಸಹಕಾರಿ ತತ್ವ,
ಬಂಗಾರದ ಮನುಷ್ಯ ಚಿತ್ರದ ನಾಯಕ ತನ್ನ ಗ್ರಾಮಸ್ಥರನ್ನು ಸಹಕಾರಿ ಕೃಷಿಗೆ ತರುವಲ್ಲಿ ಯಶಸ್ವಿಯಾದರೆ, ಮಂಥನ್ ಚಿತ್ರದ ನಾಯಕ ಇಡಿ ಜಗತ್ತೆ ಬೆರಗಾಗುವ ಹಾಗೆ ರೈತರನ್ನು ಸಂಘಟಿಸಿ ಒಂದು ಸಹಕಾರಿ ಸಂಸ್ಥೆಯನ್ನು ಕಟ್ಟುವಲ್ಲಿ ಯಶಸ್ವಿಯಾಗುತ್ತಾನೆ.
ಚಲನಚಿತ್ರ ನಾಟಕ ಕಿರುಚಿತ್ರದ ಆಸಕ್ತಿಯಿರುವ ನನ್ನ ತರಹದ ಯುವ ತಲೆಮಾರಿಗೆ ಸಹಕಾರಿ ತತ್ವ ಆದರ್ಶಗಳನ್ನು ಪರಿಚಯಿಸುವಲ್ಲಿ ಈ ಎರಡು ಚಲನಚಿತ್ರಗಳು ಸಹಕಾರಿ ಯಶಸ್ವಿಯಾಗಿವೆಆಧಾರದ ಮೇಲೆ ಬದಲಾವಣೆ ತರಲು ಸಾಧ್ಯವೆಂದು ಭರವಸೆಯನ್ನು ಮೂಡಿಸಿದವು.
ಹಿಗೇ ಪರಿಚಯವಾದ ಸಹಕಾರಿ ಕ್ಷೇತ್ರ ಮುಂದೊಂದು ದಿನ ಬಿ.ಎಸ್ಸಿ ಕೃಷಿ ಪದವಿ ವ್ಯಾಸಂಗ ಮಾಡುವಾಗ ಮತ್ತಷ್ಟು ಹತ್ತಿರವಾಗುತ್ತ ಸಾಗಿತು.ಪ್ರಾತ್ಯಕ್ಷಿಕೆಯ ಭಾಗವಾಗಿ ಹಳ್ಳಿಗಳಿಗೆ ಭೇಟಿ ಕೊಡುವ ಸಮಯದಲ್ಲಿ ಕಾಣಿಸುತ್ತಿದ್ದ ಪಾ.ಕೃ.ಪ.ಸಹಕಾರಿ ಸಂಘಗಳು, ಹಾಲು ಉತ್ಪಾದಕರ ಸಂಘಗಳು, ರಾಸಾಯನಿಕ ಗೊಬ್ಬರಗಳು ದೂರಕುವ ವ್ಯಾಪಾರ ಶಾಖೆಗಳನ್ನು ಗಮನಿಸುತ್ತಿದ್ದಾಗ ಅನಿಸಿದ್ದು ಈ ಸಹಕಾರಿ ಸಂಘಗಳು ಗ್ರಾಮಿಣ ಭಾಗದ ಜನರ ಅವಿಭಾಜ್ಯ ಅಂಗಗಳೆಂದು,
ಹೀಗಾದ ಅನುಭವಗಳಿಂದ ನನ್ನ ಸ್ವಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯನಾಗಿ,ಸಾಲಗಾರನಾಗಿ ತೀರಾ ಇತ್ತೀಚೆಗೆ ಅದರ ನಿರ್ದೇಶಕನಾಗಿ ಸಂಘದಲ್ಲಿ ಸುಧಾರಣೆ ತರುವಲ್ಲಿ ನನ್ನ ಪ್ರಯತ್ನ ಸಾಗಿದೆ. ಕಳೆದ ಒಂದು ವರ್ಷದಲ್ಲಿ ರೈತರಿಗೆ ಅನುಕೂಲವಾಗುವ ಸುಧಾರಿತ ಬೇಸಾಯ ಕ್ರಮಗಳ ವಿಚಾರ ಸಂಕೀರ್ಣಗಳನ್ನು ಎರ್ಪಡಿಸುವುದರಿಂದ ಹಿಡಿದು ಆಯ್ಕೆಯಾದ ನಿರ್ದೇಶಕರಿಗೆ ಹಾಗು ಸಿಬ್ಬಂದಿ ವರ್ಗದವರಿಗೆ ಸಹಕಾರಿ ಸಂಘಗಳ ಕಾನೂನು ಹಾಗು ತಂತ್ರಜ್ಞಾನ ಆಧಾರಿತ ತರಬೇತಿಗಳನ್ನು ಹಮ್ಮಿಕೊಳ್ಳಲಾಗಿತ್ತು.
ಅಷ್ಟೇ ಅಲ್ಲದೆ ರಾಸಾಯನಿಕ ಗೊಬ್ಬರಗಳ ಸರಿಯಾದ ಬಳಕೆಯ ಬಗ್ಗೆ ರೈತರಿಗೆ ಮಾಹಿತಿಯನ್ನು ನಿಡಲಾಗುತ್ತಿದ್ದು ಮುಂಬರುವ ದಿನಗಳಲ್ಲಿ ಮಣ್ಣು ಪರೀಕ್ಷೆ ಪ್ರಯೋಗಾಲಯವನ್ನು ಗ್ರಾಮದಲ್ಲಿ ಸಹಕಾರಿ ಸಂಘದ ಅಡಿಯಲ್ಲಿ ಸ್ಥಾಪಿಸುವ ಅಲೋಚನೆಯನ್ನು ನಾವು ಹೊಂದಿದ್ದೇವೆ. ಇದರಿಂದ ಮಣ್ಣು ಸುಧಾರಣೆಯ ಕ್ರಮಕ್ಕೆ ಮತ್ತಷ್ಟೂ ಉತ್ತೇಜನೆ ಸಿಕ್ಕಂತಾಗುತ್ತದೆ. ಇದರೊಟ್ಟಿಗೆ ಗ್ರಾಮದಲ್ಲಿ ಯುವಕರ ಸಂಖ್ಯೆ ದೊಡ್ಡದಾಗಿದ್ದು ಅವರು ಕೃಷಿಯಲ್ಲೆ ಮುಂದುವರೆಯಲು ಸೂಕ್ತವಾದ ಕಾರ್ಯಕ್ರಮಗಳನ್ನು ರೂಪಿಸಿ, ಸಹಕಾರ ಸಂಘದ ಮುಖಾಂತರ ಕೃಷಿ ಸಂಸ್ಕರಣಾ ಘಟಕವನ್ನು ಸ್ಥಾಪನೆ ಮಾಡಿ ಸ್ಥಳಿಯವಾಗಿ ಉದ್ಯೋಗ ಸೃಷ್ಟಿಗೆ ನಾವು ಒತ್ತುಕೊಟ್ಟು ಸಾಗಬೇಕಾಗಿದೆ.
ಆಡಳಿತ ನಿರ್ವಹಣೆ, ಮಾನವ ಸಂಪನ್ಮೂಲದ ಸರಿಯಾದ ಬಳಕೆ, ನಿರ್ದೇಶಕರ ಬದ್ಧತೆ, ಸಾಮಾಜಿಕ ನ್ಯಾಯದ ಅಡಿಯಲ್ಲಿ ಸುಧಾರಣೆ ತರುವಲ್ಲಿ ನಮ್ಮ ಸಹಕಾರಿ ಸಂಘಗಳನ್ನು ಮುನ್ನಡೆಸುವಲ್ಲಿ ಶ್ರಮ ವಹಿಸುವ ಅವಶ್ಯಕತೆ ಇದ್ದು ಭಾರತ ಸರ್ಕಾರ ರಚಿಸಿರುವ ರಾಷ್ಟ್ರೀಯ ಸಹಕಾರಿ ನಿತೀಯ ಸದ್ಬಳಕೆಯಿಂದ ಗ್ರಾಮಗಳನ್ನು ಆರ್ಥಿಕ ಹೆಬ್ಬಾಗಿಲಾಗಿಸುವಲ್ಲಿ ಸಹಕಾರಿಗಳು ಮುನ್ನಡೆಯಬೇಕಾಗಿದೆ.

ಮಹೇಶ ದೇಶಪಾಂಡೆ.
ನಿರ್ದೇಶಕರು
ಪಿಎಸಿಎಸ್
ಹಿರೇಪದಸಲಗಿ
ಜಾಮಖಂಡಿ
ಬಾಗಲಕೋಟೆ