ಉತ್ತರ ಕನ್ನಡ ಜಿಲ್ಲೆಯು ಸಹಕಾರಿ ಚಳುವಳಿಯಲ್ಲಿ ಒಂದು ವಿಶೇಷ ಸ್ಥಾನ ಹೊಂದಿದ್ದು ಇಲ್ಲಿನ ವಿವಿಧ ರೀತಿಯ ಸಹಕಾರಿ ಸಂಘ ಸಂಸ್ಥೆಗಳು ರಾಜ್ಯದ ಸಹಕಾರಿ ಚಳುವಳಿಯನ್ನು ಶ್ರೀಮಂತಗೊಳಿಸಿದೆ. ಜಿಲ್ಲೆಯ ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದಲ್ಲಿ ರೈತ ಕುಟುಂಬದಲ್ಲಿ ದಿನಾಂಕ 13.11.1969 ರಂದು ಜನಿಸಿದ ಶ್ರೀ ವಿಶ್ವನಾಥ ಸುಬ್ರಾಯ ಭಟ್ಟ ಇವರು ಖರ್ವಾ ಗ್ರಾಮದಲ್ಲಿಯೇ ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮುಗಿಸಿ ಕೃಷಿಯನ್ನು ತಮ್ಮ ಜೀವನೋಪಾಯವಾಗಿ ಬಳಸಿಕೊಂಡಿದ್ದರೂ ತದನಂತರ ಪ್ರಥಮ ದರ್ಜೆ ಸಿವಿಲ್ ಗುತ್ತಿಗೆದಾರರಾಗಿ ಹಲವು ವರ್ಷಗಳ ಕಾಲ ಕೆಲಸ ನಿರ್ವಹಿಸಿ ಅನುಭವ ಪಡೆದಿದ್ದಾರೆ. ಸದರಿಯವರು ಪ್ರಾರಂಭದಿಂದಲೇ ಸಹಕಾರಿ ಚಳುವಳಿಯ ಕಡೆಗೆ ತಮ್ಮ ಒಲವು ತೋರಿಸಿದ್ದಾರೆ.
ರಾಜ್ಯದಲ್ಲಿಯೇ ಪ್ರತಿಷ್ಠಿತ ಜೇನು ಸಾಕುವವರ ಸಹಕಾರಿ ಸಂಘ ಎಂದು ಹೆಸರು ಪಡೆದಿರುವ ಹೊನ್ನಾವರ ಜೇನು ಸಾಕುವವರ ಮತ್ತು ಗ್ರಾಮೀಣ ಕೈಗಾರಿಕಾ ಸಹಕಾರಿ ಸಂಘದಲ್ಲಿ ನಿರ್ದೇಶಕರಾಗಿ 2005ರಲ್ಲಿ ಆಯ್ಕೆಗೊಂಡು 14 ವರ್ಷಗಳ ಕಾಲ ನಿರ್ದೇಶಕರಾಗಿ ಹಾಗೂ ಕಳೆದ 6 ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುತ್ತಾರೆ. ತಮ್ಮ ಅಧಿಕಾರದ ಅವಧಿಯಲ್ಲಿ ಸಂಘವನ್ನು ಸಮರ್ಥವಾಗಿ ಮುನ್ನಡೆಸಿ ಸಂಘವು ಪ್ರಗತಿಯ ಹಾದಿಯಲ್ಲಿರುವಂತೆ ಮಾರ್ಗದರ್ಶನ ನೀಡುತ್ತಾ ಬಂದಿರುತ್ತಾರೆ.
ಅಲ್ಲದೇ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಔದ್ಯೋಗಿಕ ಸಹಕಾರ ಸಂಘಗಳ ಮತಕ್ಷೇತ್ರದಿಂದ ಪ್ರಚಂಡ ಬಹುಮತದಿಂದ 2 ನೇ ಬಾರಿಗೆ ಆಯ್ಕೆಯಾಗಿ ಕೆನರಾ ಡಿಸ್ಟ್ರಿಕ್ಷ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಶಿರಸಿ ಇದರ ನಿರ್ದೇಶಕರಾಗಿದ್ದಾರೆ. ಜಿಲ್ಲೆಯ ಸಹಕಾರಿಗಳ ನಿಕಟ ಸಂಪರ್ಕ ಹೊಂದಿದ್ದು ಸಹಕಾರಿ ಬ್ಯಾಂಕಿಂಗ್ ಹಾಗೂ ಔದ್ಯೋಗಿಕ ಸಹಕಾರಿ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದು ವಿದೇಶಗಳಿಗೆ ಶೈಕ್ಷಣಿಕ ಪ್ರವಾಸದಲ್ಲಿ ಪಾಲ್ಗೊಂಡು ಅನುಭವ ಪಡೆದಿರುತ್ತಾರೆ. ಅಲ್ಲದೇ ಟಿ.ಎ.ಪಿ.ಸಿ.ಎಮ್.ಎಸ್. ಹೊನ್ನಾವರದ ನಿರ್ದೇಶಕರಾಗಿ ಮಾರಾಟ ಕ್ಷೇತ್ರದಲ್ಲಿಯೂ ಹೆಚ್ಚಿನ ಅನುಭವ ಹೊಂದಿರುತ್ತಾರೆ. ಹೀಗೆ ಸಹಕಾರಿ ಕ್ಷೇತ್ರದ ವಿವಿಧ ಮಜಲುಗಳಲ್ಲಿ ಸೇವೆ ಸಲ್ಲಿಸಿ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ.
ಹೀಗೆ ಗ್ರಾಮೀಣ ಪ್ರದೇಶದಿಂದ ಬಂದಿರುವ ಶ್ರೀ ವಿಶ್ವನಾಥ ಎಸ್. ಭಟ್ಟ ಇವರು ಪ್ರಯತ್ನ ಮತ್ತು ಪ್ರತಿಭೆಯಿಂದ ಜಿಲ್ಲೆಯ ಉದಯೋನ್ಮುಖ ಸಹಕಾರಿ ಧುರೀಣರಾಗಿ ಹೊರಹೊಮ್ಮಿದ್ದಾರೆ. ಸದರಿಯವರಿಗೆ ಉತ್ತಮ ಸಹಕಾರಿ ಭವಿಷ್ಯ ಅಡಗಿದೆ ಎಂದು ಬೇರೆ ಹೇಳಬೇಕಿಲ್ಲ.
ಪರಿಚಯಿಸಿದವರು

ಶಂಕರ ಹೆಗಡೆ
ಸಹಕಾರಿ ಸಲಹೆಗಾರರು ತುಮಕೂರು
(7204789315)