ಕರ್ನಾಟಕದಲ್ಲಿನ ಸಹಕಾರ ಕಾಯ್ದೆಗಳ ಇತ್ತೀಚೆಗಿನ ತಿದ್ದುಪಡಿಗಳು ( ಕಾಯ್ದೆ 1959, ಕಲಂ 58, ಸೌಹಾರ್ಧ ಕಾಯ್ದೆ 1997, ಕಲಂ18) ಸಹಕಾರ ವಲಯದಲ್ಲಿ ಒಂದು ರೀತಿಯ ಸಂಚಲವನ್ನು ಉಂಟು ಮಾಡಿದೆ. ಅಲ್ಲದೆ, ಸೌಹಾರ್ಧ ಕಾಯ್ದೆ ತಿದ್ದುಪಡಿಯನ್ನು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಏಳು ಸಹಕಾರ ತತ್ವಗಳಲ್ಲಿ ಆರನೇ ತತ್ವವಾದ ಈ ತತ್ವದ ಆಚರಣೆಯಲ್ಲಿನ ಸಾಧಕ ಬಾಧಕಗಳು , ಆಶಯಗಳನ್ನು ಚರ್ಚಿಸುವುದು, ಸಂವಾದಕ್ಕೆ ಅಳವಡಿಸುವುದು, ಸಹಕಾರ ಚಳುವಳಿಯ ಬೆಳವಣಿಗೆ ದೃಷ್ಟಿಯಿಂದ ಅವಶ್ಯಕವಾಗಿದೆ.
ಮೂಲಭೂತವಾಗಿ ಸಹಕಾರ ತತ್ವಗಳು ಬೆಳೆದು ಬಂದ ರೀತಿಯನ್ನು ವಿಶ್ಲೇಷಿಸಿದಲ್ಲಿ , ತಿಳಿದು ಬರುವ ವಿಷಯವೆಂದರೆ ‘ರಾಕ್ ಡೇಲ್ ಅಗ್ರಗಾಮಿಗಳು ‘ ‘ ಯಶಸ್ವಿ’ ಸಹಕಾರ ಸಂಘವನ್ನು ಸ್ಥಾಪನೆ ಮಾಡಲು ಸಾಧ್ಯವಾದದ್ದು, ಹಿಂದಿನ ವಿಫಲಗೊಂಡ ಸಂಘಗಳ ವಿಫಲಗೊಳ್ಳಲು ಆದ ಕಾರಣಗಳನ್ನು ಅರಿತು ಅವುಗಳ ಸರಿಪಡಿಸುವಿಕೆಯಿಂದ ಮತ್ತು ತಮಗೆ ತಾವೇ ನಿರೂಪಿಸಿಕೊಂಡ ನಿಯಮಗಳು. ಈ ನಿಯಮಗಳೇ ಮುಂದೆ ‘ಸಹಕಾರ ತತ್ವ’ಗಳಾದವು. ಸಣ್ಣ ಪುಟ್ಟ ಸಹಕಾರ ಸಂಘಗಳು (ಗ್ರಾಹಕ) ವ್ಯವಹಾರ ಗಾತ್ರ ವಿಸ್ತರಿಸಲು, ಸದಸ್ಯರಿಗೆ ಅದರ ಪ್ರಯೋಜನ ತಲುಪಿಸಲು ಅನುಕೂಲವಾಗುವಂತೆ ಅವುಗಳ ಶೃಂಗ ಸಂಘಗಳು (ಒಕ್ಕೂಟ, ಮಹಾಮಂಡಳ) ಗಳು ರಚಿತವಾದವು.(ಯುರೋಪ್ನಲ್ಲಿ). ಇದರಿಂದ ಸದರಿ ಆರನೇ ತತ್ವವಾದ “ಸಹಕಾರ ಸಂಘಗಳ ನಡುವೆ ಸಹಕಾರ” ತತ್ವವು ಉದ್ಭವವಾಗಲು ಕಾರಣವಾಯಿತು. ಇದರಿಂದ ಸಹಕಾರ ಚಳುವಳಿ ವಿಸ್ತಾರ ಗೊಳ್ಳಲು ಹೆಚ್ಚು ಹೆಚ್ಚು ಜನರನ್ನು ಒಳಗೊಳ್ಳಲು ಸಾಧ್ಯವಾಯಿತು.
ಸಹಕಾರ ಚಳುವಳಿ ಬೆಳೆದು ಇತರ ವಲಯಗಳಿಗೂ ಹಬ್ಬಿದ ಮೇಲೆ ಈ ತತ್ವ ಮತ್ತಷ್ಟು ವಿಸ್ತರಿಸಿ ಬಗೆ ಬಗೆಯ ಸಹಕಾರ ಸಂಘಗಳ ನಡುವೆ ಸಹಕಾರ ಉದಾ: ಪತ್ತು, ಕೃಷಿ ಪತ್ತು, ಕೃಷಿ ಉತ್ಪನ್ನ ಮಾರುಕಟ್ಟೆ, ಬಳಕೆದಾರರ, ಇವುಗಳ ನಡುವೆ ಸಹಕಾರ ಏರ್ಪಟ್ಟಲ್ಲಿ ವ್ಯವಹಾರಗಳ ವೃದ್ಧಿ ಯಾಗುವುದಲ್ಲದೇ “ಬಂಡವಾಳ”(ಹಣಕಾಸು) ಮತ್ತು ಇತರೆ ಸಂಪನ್ಮೂಲಗಳ
ಒಗ್ಗೂಡುವಿಕೆ ಸಾಧ್ಯವಾಗುತ್ತದೆ. ಇತರೆಡೆಗೆ ಹರಿದು ಹೋಗದೆ ಸಹಕಾರ ವಲಯದಲ್ಲಿಯೇ ಕ್ರೋಡಿಕರಣ ಗೊಂಡು ಸಹಕಾರ ವಲಯ ಬಲಗೊಳ್ಳುತ್ತದೆ. ಸಹಕಾರ ಚಳುವಳಿ ಬೆಳೆಯಲು ಕಾರಣವಾಗುತ್ತದೆ. ಎಂಬ ಆಶಯದಂತೆ ಕಾರ್ಯನಿರ್ವಹಿಸಿದ್ದು ಸಹಕಾರ ಚಳುವಳಿಗೆ ಬಲವರ್ಧನೆಗೆ ಈ ತತ್ವ ಪಾಲನೆ ಸಹಕಾರಿ ಯಾಗಿರುತ್ತದೆ.
ಲಂಭಾಕೃತಿಯಲ್ಲಿ (Verticle) ಸಹಕಾರ ಶೃಂಗ ವ್ಯವಸ್ಥೆ (cooperative federalism) ನಿರ್ಮಾಣ, ವಿವಿಧ ಹಂತದ ವ್ಯವಸ್ಥೆ ನಡುವಿನ ಸಾವಯವ ಸಂಬಂಧಗಳು , ಕರ್ತವ್ಯ ಮತ್ತು ಪಾತ್ರಗಳ ನಿರ್ವಹಣೆ, ಮತ್ತು ವಿವಿಧ ಹಂತದಲ್ಲಿ , ಪ್ರಾಥಮಿಕ, ಒಕ್ಕೂಟ, ಮಹಾಮಂಡಳ ಗಳ ನಡುವಿನ ಸಹಕಾರ (ಅಡ್ಡ-horizantal) ಸಂಘಗಳ ನಡುವೆ ಸಹಕಾರ ದಿಂದ ಬಂಡವಾಳ ವೃದ್ಧಿ , ಅದರಿಂದ ವ್ಯವಹಾರಗಳ ವಿಸ್ತಾರ. ತನ್ಮೂಲಕ ಅಂತಿಮವಾಗಿ ವ್ಯಕ್ತಿ ಸದಸ್ಯರ ಆರ್ಥಿಕ ಬೆಳವಣಿಗೆ, ಇದರಲ್ಲಿ ಎಲ್ಲರನ್ನೂ ಒಳಗೊಂಡು ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗಿರುತ್ತದೆ. ಇದರಿಂದ ಜಗತ್ತಿನ ಸುಸ್ಥಿರ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡಲು ಸಾಧ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಸಹಕಾರ ಕಾಯ್ದೆಯಲ್ಲಿ ಸಹಕಾರ ಸಂಘಗಳು ತಮ್ಮ ನಿಧಿಗಳನ್ನು ಸಹಕಾರ ಬ್ಯಾಂಕ್ ಗಳಲ್ಲಿ ಠೇವಣಿಸಲು ಅವಕಾಶ ಕಲ್ಪಿಸಲಾಗಿದೆ.
ನಿಬಂಧಕರ ಆದೇಶದನ್ವಯ ಸಹಕಾರ ಸಂಘಗಳು ಆರಂಭಿಕ ಷೇರು ಬಂಡವಾಳ ಸಂಗ್ರಹಣೆಯನ್ನು ಜಿ.ಕೇ. ಸ.ಬ್ಯಾಂಕ್/ಕ.ರಾ.ಸ. ಅಪೆಕ್ಸ ಬ್ಯಾಂಕ್ ನಲ್ಲಿ ಆರಂಭಿಸುವ ‘ಅಮಾನತ್ತು’ ಖಾತೆಯಲ್ಲಿ ಜಮಾ ಮಾಡಬೇಕು. ಸಂಘ ಕಾರ್ಯಾರಂಭ ಮಾಡಿದ ನಂತರ ನಿಬಂಧಕರ ‘ಬಿಡುಗಡೆ’ ಆದೇಶದಂತೆ ‘ಉಳಿತಾಯ ಖಾತೆಗೆ ‘ವರ್ಗಾಯಿಸಲಾಗುವುದು. ಅದರಂತೆ ಸಹಕಾರ ಸಂಘಗಳು ನಿಬಂಧಕರ ಅನುಮತಿಯೊಂದಿಗೆ ಇತರೆ ಬ್ಯಾಂಕ್ ಗಳಲ್ಲಿ ಖಾತೆ ತೆರೆದು ವ್ಯವಹರಿಸಬಹುದು. ಆಪದ್ಧನ (ಮೀಸಲು) ನಿಧಿ, ರಿಸರ್ವ ಫಂಡ್ ನ್ನು ಸಹಕಾರ ಬ್ಯಾಂಕ್ ನಲ್ಲಿ ಮಾತ್ರ ಠೇವಣಿಸಲು ಅವಕಾಶವಿದೆ. ಈ ತರಹೆಯ ನಿಬಂಧನೆಗಳು/ನಿಯಮಗಳು ಈ ತತ್ವಕ್ಕಾಗಿ ಅಡಕವಾಗಿರುವುದನ್ನು ಅರ್ಥಮಾಡಿಕೊಳ್ಳಬೇಕಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಂತೆ ” ಜಿಲ್ಲ ಕೇಂದ್ರ ಸಹಕಾರ ಬ್ಯಾಂಕ್ ಎಂದರೆ ಆ ಜಿಲ್ಲೆಯಲ್ಲಿನ ಸಹಕಾರ ಸಂಘಗಳಿಗೆ ಆರ್ಥಿಕತೆ ಒದಗಿಸುವ ಪ್ರಮುಖ ಉದ್ದೇಶವುಳ್ಳ ಸಹಕಾರ ಸಂಘ “. ರಾಜ್ಯ ಸಹಕಾರ ಬ್ಯಾಂಕ್ ಎಂದರೆ ಆ ರಾಜ್ಯದಲ್ಲಿನ ಸಹಕಾರ ಸಂಘಗಳಿಗೆ ಆರ್ಥಿಕತೆ ಒದಗಿಸುವ ಪ್ರಮುಖ ಉದ್ದೇಶವುಳ್ಳ ಸಹಕಾರ ಸಂಘ”.ಎಂದು ವ್ಯಾಖ್ಯಾನಿಸಿದೆ. ಅಲ್ಲದೆ ಅಧ್ಯಯನ ಕಾರರು ಜಿಲ್ಲೆಯಲ್ಲಿನ / ರಾಜ್ಯದಲ್ಲಿನ ವಿವಿಧ ಸಹಕಾರ ಸಂಘಗಳ ಪತ್ತಿನ ಅವಶ್ಯಕತೆಗಳ ಪೂರೈಕೆಯೇ ಈ ಬ್ಯಾಂಕ್ ಗಳ ಕರ್ತವ್ಯ. ಅಲ್ಲದೆ ಜಿಲ್ಲೆಯ / ರಾಜ್ಯದ ಸಹಕಾರ ಸಂಘಗಳ ಹೆಚ್ಚುವರಿ ನಿಧಿಗಳ ಸಂಗ್ರಹಣಿ ಮತ್ತು ಅಗತ್ಯವಿರುವ ಸಹಕಾರ ಸಂಘಗಳಿಗೆ ಪತ್ತು ಒದಗಿಸುವುದೇ ಇವುಗಳ ಕರ್ತವ್ಯ ಎಂದು ವಿವರಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಈ ಆರನೇ ಸಹಕಾರ ತತ್ವವನ್ನು ಸಹಕಾರ ಸಂಘಗಳು ಪಾಲಿಸಬೇಕಾಗುತ್ತದೆ.
ಈ ತತ್ವ ಪಾಲನೆಯು ತೊಂಭತ್ತರ ದಶಕದ ವರೆಗೂ ಅನೂಚನವಾಗಿ ನಡೆದುಕೊಂಡು ಬಂದದನ್ನು ಕಂಡಿರುತ್ತೇವೆ. ತದ ನಂತರದಲ್ಲಿ ಆರ್ಥಿಕ ನೀತಿಯಲ್ಲಿ ಆದ ಬದಲಾವಣೆಯಂತೆ, ವಾಣಿಜ್ಯ, ಗ್ರಾಮೀಣ ಬ್ಯಾಂಕ್ ಗಳ , ಖಾಸಗಿ ಬ್ಯಾಂಕ್ ಗಳ ವಿಸ್ತರಣಿ , ಸ್ಪರ್ದೆ ಯಿಂದ ಈ ತತ್ವ ಪಾಲನೆ ಸಡಿಲಗೊಂಡಿತು. ಸ್ಪರ್ಧೆಯಲ್ಲಿ ಸಹಕಾರ ಬ್ಯಾಂಕ್ ಗಳು ಹಿಂದೆ ಉಳಿದವು. ಸರ್ಕಾರ ಅವಲಂಭಿಸಿ ನಡೆಯುತ್ತಿದ್ದ ಸಹಕಾರ ವಲಯ, ಮತ್ತು ಗ್ರಾಮೀಣ ಕೈಗಾರಿಕೆ , ಕೈಗಾರಿಕೆ ವಲಯಗಳು ಸ್ಥಗಿತ ಗೊಂಡವು. ಆಧುನಿಕ ಆರ್ಥಿಕತೆಯ ಬೆಳವಣಿಗೆಯ ಫಲಾನುಭವವನ್ನು ಒಳಗೊಳ್ಳಲು ನಮ್ಮ ಸಹಕಾರ ವಲಯ ವಿಫಲವಾದ ವೇ ಎಂಬ ಪ್ರಶ್ನೆ ಮೂಡುವುದು ಸಹಜವಾಗಿದೆ.
ಸಹಕಾರ ಚಳುವಳಿ ಸ್ವತಂತ್ರವಾಗಿ ಬೆಳೆಯಲಿ ಎಂಬ ಆಶಯ / ಉದ್ದೇಶದಿಂದ ಜಾರಿಗೆ ತಂದ (ಕರ್ನಾಟಕದಲ್ಲಿ ಸೌಹಾರ್ಧ ಸಹಕಾರ ಕಾಯ್ದೆ) ಕಾಯ್ದೆಯಲ್ಲಿ ‘ಸಹಕಾರಿ ಆಂದೋಲನ’ವನ್ನು ಬಲಪಡಿಸುವ ಬಗ್ಗೆ ಶೃತ ಪಡಿಸಲಾಗಿದೆ. ಈ ಕಾಯ್ದೆಯಡಿಯಲ್ಲಿನ ಸಹಕಾರ ಸಂಸ್ಥೆಗಳು ಈ ತತ್ವವನ್ನು ಪರಿಪಾಲನೆ ಮಾಡುವ ಅಗತ್ಯತೆ ಇದೆ. ಈ ಚಳುವಳಿಯು ಕರ್ನಾಟಕದಲ್ಲಿ ಅತ್ಯುತ್ತಮವಾಗಿ ಬೆಳೆಯುತ್ತಿದ್ದು ಸಹಕಾರ ಬಂಡವಾಳ ವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ. ಇವುಗಳ ವ್ಯವಹಾರಗಳು ಮತ್ತು ಹೆಚ್ಚುವರಿ ನಿಧಿಗಳು ಸಹಕಾರ ವಲಯದಲ್ಲೇ ಸಂಚಾರ ಗೊಂಡಲ್ಲಿ ಕರ್ನಾಟಕದ ಸಹಕಾರ ಚಳುವಳಿಗೆ ಇಂಬು ಕೊಟ್ಟಂತಾಗುತ್ತದೆ.
ಕೇಂದ್ರ ಸರ್ಕಾರದ ನೀತಿಯಂತೆ ಸಹಕಾರ ಬ್ಯಾಂಕ್ ಗಳ ಆಪದ್ಧನ ನಿಧಿ (ಮೀಸಲು ನಿಧಿ, ರಿಸರ್ವ ಫಂಡ್) ಯನ್ನು ಸರ್ಕಾರದ ಸೆಕ್ಯೂರಿಟಿಯಲ್ಲಿ ತೊಡಗಿಸುವಂತೆ ಬದಲಾಯಿಸಿರುವುದು ಸಹಕಾರದ ಬಂಡವಾಳ ವೃದ್ಧಿಗೆ ತೊಡಕಾಗಿ ಪರಿಣಮಿಸಿದೆ.
ಸಹಕಾರ ಬ್ಯಾಂಕ್ ಗಳು/ಸಂಸ್ಥೆಗಳು ಪ್ರಜಾಸತ್ತಾತ್ಮಕ ನಿಯಂತ್ರಣವುಳ್ಳ ಸಂಸ್ಥೆಗಳಾಗಿರುತ್ತವೆ. ಒಟ್ಟಾರೆ ಸಹಕಾರ ಪರಿಸರದ ‘ಅಸ್ಮಿತೆ’ ನಿರ್ಮಿಸಬೇಕಾದ/ಉಳಿಸಬೇಕಾದ ಜವಾಬ್ದಾರಿ ಈ ಸಂಸ್ಥೆಗಳ ಮೇಲಿದೆ. ಸದ್ಯದ ‘ಪರಿಸರ’ ಸಕಾರಾತ್ಮಕವಾಗಿದಿಯೇ ಎಂಬ ‘ಆತ್ಮಾವಲೋಕನ’ ಮಾಡಿಕೊಳ್ಳಬೇಕಾದ ಅಗತ್ಯತೆ ಈಗಿನ ದಿನಮಾನಗಳ ತುರ್ತು ಅಗತ್ಯತೆ ಇದೆ.
ಪಟ್ಟಭದ್ರ ಹಿತಾಸಕ್ತಿಗಳ ಮೇಲುಗೈ, ಅಪಾರದರ್ಶಕ ವ್ಯವಹಾರಗಳು, ಭ್ರಷ್ಟಾಚಾರ ಸಹಿತ ಚುನಾವಣೆಗಳು , ಆಗಿಂದಾಗ್ಯೆ ಬಹಿರಂಗ ಗೊಳ್ಳುತ್ತಿರುವ ಅವ್ಯವಹಾರಗಳು, ದುರಪಯೋಗಗಳು ಬಹಿರಂಗವಾಗಿದೇ ಒಮ್ಮೆಲೆಗೆ ಅತೀವ ಸಂಕಷ್ಟದ ನಂತರ ಬೆಳಕಿಗೆ ಬರುತ್ತಿರುವುದು, ಇಡೀ ಸಹಕಾರ ವ್ಯವಸ್ಥೆ ಯನ್ನೇ ಅನುಮಾನಾಸ್ಪದವಾಗಿ ನೋಡುವಂತಾಗಿದೆ. ಈ ಪರಿಸ್ಥಿತಿಯಲ್ಲಿ ಇತರೆ ಸಹಕಾರ ಸಂಸ್ಥೆಗಳು ಅನುಮಾನ ಪಡುವಂತಾಗಿ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಈ ಸಂಶಯಗಳ ನಿವಾರಣೆ, ಪಾರದರ್ಶಕ ನಡವಳಿಕೆಗಳು, ಸ್ವಹಿತಾಸಕ್ತಿ ಬದಿಗಿರಿಸಿ, ಸದಸ್ಯ/ ಠೇವಣಿದಾರರ/ಹೂಡಿಕೆದಾರರ ಹಿತಾಸಕ್ತಿಗೆ ಪ್ರಾಧಾನ್ಯ ನೀಡುವ ವ್ಯವಹರಣೆಗಳು, ಇತರೆ ಸಹಕಾರ ಸಂಸ್ಥೆಗಳ ‘ನಂಬಿಕೆ’ ಗಳಿಸಲು ಸಾಧ್ಯವಾಗುತ್ತದೆ.
ಅಂತರರಾಷ್ಟ್ರೀಯ ಮೈತ್ರಿ ಸಂಸ್ಥೆಯು ಈ ಆರನೇ ತತ್ವದ ಆಚರಣೆ ಸಂಬಂಧ ಉನ್ನತ ಸಹಕಾರ ಸಂಸ್ಥೆಗಳು ಈ ಕೆಳಕಂಡ ಅಂಶಗಳ ಪಾಲನೆ ಮಾಡುವ ಬಗ್ಗೆ ಬೆಳಕು ಚೆಲ್ಲುತ್ತದೆ.
1. ಮುಕ್ತತೆ ಮತ್ತು ಪಾರದರ್ಶಕತೆ :(open & transparency in structure & operations): ತಮ್ಮ ರಚನೆಯಲ್ಲಿ ಮತ್ತು ತೆಗೆದುಕೊಳ್ಳುವ ನಿರ್ಧಾರ , ಆಚರಣೆ, ಕಾರ್ಯನಿರ್ವಹಿಸುವ ರೀತಿ ಯಾರಿಗೂ ಅನುಮಾನಕ್ಕೆ ಕಾರಣವಾಗಬಾರದು. ತೆರೆದ ಪುಸ್ತಕದಂತಿರಬೇಕು.
2. ಹೊಣೆಗಾರಿಕೆ :(Accountablity): ಆಡಳಿತ ಮಂಡಳಿ, ಪಧಾಧಿಕಾರಿಗಳು, ತೆಗೆದುಕೊಳ್ಳುವ ನೀತಿ, ನಿರ್ಧಾರಗಳಿಗೆ, ಆಗುಹೋಗುಗಳಿಗೆ ಜವಾಬ್ದಾರರು ಎಂಬ ಅರಿವಿರಬೇಕು ಹಾಗೂ ಹಾಗೆ ವರ್ತಿಸಬೇಕು.
3. ಪ್ರಾತಿನಿಧ್ಯ 🙁 repesentation) ಒಳಗೊಳ್ಳುವ ಎಲ್ಲ ಭಾಗಿದಾರರಿಗೆ ಆಡಳಿತ , ನಿರ್ಧಾರ ತೆಗೆದುಕೊಳ್ಳುವಲ್ಲಿ ಪ್ರಾತಿನಿಧ್ಯ ಒದಗಿಸಿ ಭಾಗವಹಿಸುವಿಕೆಯನ್ನು ಖಾತರಿ ಪಡಿಸಿಕೊಳ್ಳಬೇಕು.
4. ಹೊಂದಿಕೊಳ್ಳುವಿಕೆ:(Adjustblity): ಕೊಡು-ಕೊಳ್ಳು, ಒಬ್ಬರು ಮತ್ತೊಬ್ಬರನ್ನು ಅರ್ಥ ಮಾಡಿಕೊಂಡು ಒಟ್ಟಿಗೆ ಮುನ್ನಡೆಯುವುದು.
5.ಪರಸ್ಪರತೆ:(Mutuality): ನಂಬಿಕೆ, ವಿಶ್ವಾಸ ಇದರ ಬುನಾದಿ, ಒಬ್ಬರು ಕಷ್ಟದಲ್ಲಿದ್ದಾಗ ಮತ್ತೊಬ್ಬರು ಸಹಾಯ ಮಾಡುವುದು.
6. ಸಹಕಾರ ‘ಅಸ್ಮಿತೆ’ ಪಾಲನೆ:(Co-operative identity): ನಾವು ಸಹಕಾರಿಗಳು/ ಸಹಕಾರ ಸಂಸ್ಥೆಗಳು ಹೆಮ್ಮೆ ನಮ್ಮದಾಗಬೇಕು.
7. ರಚನಾತ್ಮಕ ಸ್ವರೂಪ:(Structure): ಪ್ರತಿ ಸಹಕಾರ ರಚನೆಯೂ ತನ್ನದೇ ಆದ ಚರಿತ್ರೆ ಹೊಂದಿದ್ದು ತನ್ನ ಸಾಮರ್ಥ್ಯದ ಮೇಲೆ ಬೆಳೆದಿದೆ ಎಂಬ ತಿಳುವಳಿಕೆಯೊಂದಿಗೆ ಪ್ರತಿ ರಚನೆಯೂ ಮತ್ತೊಂದನ್ನು ಗೌರವಿಸುವುದು ಮತ್ತು’ ಸಹಕಾರ’ದಿಂದ ವರ್ತಿಸುವುದು.
ಇವುಗಳ ಪಾಲನೆಯಿಂದ ‘ಸಹಕಾರ ಚಳುವಳಿ’ ಬೆಳೆಯಲು ಸಾಧ್ಯವಾಗುತ್ತದೆ. ಪ್ರತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಲ್ಲಿ ಅವನತಿಗೆ ಕಾರಣವಾಗುತ್ತದೆ. ಇದರ ಪರಿಣಾಮ ಕೆಳಹಂತದ ಫಲಾನುಭವಿಯಾದ ವ್ಯಕ್ತಿಗತ ‘ಸದಸ್ಯರು’ ವಂಚಿತರಾಗುತ್ತಾರೆ. ಈ ಅರಿವು ಸಹಕಾರಿಗಳಲ್ಲಿ ಸಹಕಾರ ನಾಯಕತ್ವದಲ್ಲಿ ಮೂಡಬೇಕಾಗಿದೆ.
ಶಶಿಧರ. ಎಲೆ .
ಸಹಕಾರ ಸಂಘಗಳ ಅಪರ ನಿಬಂಧಕರು ( ನಿವೃತ್ತ)
ಬೆಂಗಳೂರು