ಸಹಕಾರ ಕ್ಷೇತ್ರದ ಬಲವರ್ಧನೆಗೆ ನಿರಂತರ ಸಕ್ರಿಯ ಕಾರ್ಯ:  ಆರ್ಥಿಕ ವ್ಯವಸ್ಥೆ, ಸಾಮಾಜಿಕ ಸಬಲೀಕರಣ ಬಲಿಷ್ಠಗೊಳಿಸುವ ಸಂಕಲ್ಪದೊಂದಿಗೆ “ಸಹಕಾರ ಭಾರತಿ ಕೆಲಸ”|ಶ್ರೀ.ಸಾಣೂರು ನರಸಿಂಹ ಕಾಮತ್.

ದೇಶದ ಸಹಕಾರಿ ರಂಗಕ್ಕೆ ಹೊಸ ದಿಕ್ಕನ್ನು ತೋರಿಸುವ ಮಹತ್ತರ ಉದ್ದೇಶದೊಂದಿಗೆ “ಬಿನಾ ಸಂಸ್ಕಾರ್ ನಹೀ ಸಹಕಾರ್… ಬಿನಾ ಸಹಕಾರ್ ನಹೀ ಉದ್ದಾರ್” ಎಂಬ ಧ್ಯೇಯವಾಕ್ಯದೊಂದಿಗೆ 1978 ಸೆಪ್ಟೆಂಬರ್ 15ರ ಅನಂತ ಚತುರ್ದಶಿಯ ಶುಭ ದಿನದಂದು ಸಹಕಾರ ಭಾರತಿ ಸಹಕಾರಿ ಕ್ಷೇತ್ರದ ಏಕೈಕ ಸರಕಾರೇತರ ರಾಜಕೀಯ ರಹಿತ ಸ್ವಯಂಸೇವಾ ರಾಷ್ಟ್ರೀಯ ಸಂಘಟನೆಯಾಗಿ ಜನ್ಮತಾಳಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದ ದಿ.ಲಕ್ಷ್ಮಣ ರಾವ್ ಇನಾಂದಾರ್ ಅವರ ಮಾರ್ಗದರ್ಶನ ಹಾಗೂ ದಿ.ಮಾಧವ ರಾವ್ ಗೋಡ್ಬೋಲೆಯವರ ನೇತೃತ್ವದಲ್ಲಿ ಸಹಕಾರಿ ರಂಗದ ಏಕೈಕ ಸ್ವಯಂಸೇವಾ ಸಂಘಟನೆ ಸಹಕಾರ ಭಾರತಿ -“ಸಂಪರ್ಕ, ಸೇವೆ, ಸಮರ್ಪಣೆ “—ಮೂರು ಪ್ರಧಾನ ಸೂತ್ರಗಳ ಆಧಾರದಲ್ಲಿ ಮಹಾರಾಷ್ಟ್ರದ ಪೂನಾದಲ್ಲಿ ಆರಂಭವಾಗಿ ಸಹಕಾರ ಚಳವಳಿ ಮೂಲಕ ಸಮಾಜದ ಅರ್ಥ ವ್ಯವಸ್ಥೆ ಹಾಗೂ ಸಾಮಾಜಿಕ ಸಬಲೀಕರಣವನ್ನು ಬಲಿಷ್ಠಗೊಳಿಸುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತ ಬರುತ್ತಿದೆ. 1979ರ ಜನವರಿ 11ರಂದು ರಾಷ್ಟ್ರಮಟ್ಟದಲ್ಲಿ ನೋಂದಾವಣೆಗೊಂಡ ಸಹಕಾರ ಭಾರತಿ ಸಂಘಟನೆಯು ಈ ದಿನವನ್ನು ಪ್ರತಿವರ್ಷ ತನ್ನ “ಸಂಸ್ಥಾಪನಾ ದಿನವಾಗಿʼʼ ದೇಶಾದ್ಯಂತ ಆಚರಿಸಿಕೊಂಡು ಬರುತ್ತಿದೆ. ಪ್ರಸ್ತುತ ದೇಶದ ಎಲ್ಲಾ ರಾಜ್ಯಗಳ ಸುಮಾರು 700 ಜಿಲ್ಲೆಗಳಲ್ಲಿ ಸಕ್ರಿಯವಾದ ಜಿಲ್ಲಾ ಸಮಿತಿಯ ಜೊತೆಗೆ ಸಂಘಟನಾತ್ಮಕವಾಗಿ ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತ ಬರುತ್ತಿದೆ.

 

ಕರ್ನಾಟಕಕ್ಕೆ ಸಹಕಾರ ಭಾರತಿಯ ಪ್ರವೇಶ:

ಕರ್ನಾಟಕಕ್ಕೆ1989ರಲ್ಲಿ ಹೆಜ್ಜೆಯಿಟ್ಟ ಸಂಘಟನೆ ಕಳೆದ 35 ವರ್ಷಗಳಲ್ಲಿ ಹಂತಹಂತವಾಗಿ ವಿಸ್ತರಿಸಲ್ಪಟ್ಟು ಪ್ರಸ್ತುತ ರಾಜ್ಯದ 32 ಜಿಲ್ಲೆ ಮತ್ತು ಮೂರು ಮಹಾನಗರಗಳಲ್ಲಿಮತ್ತು 195 ತಾಲೂಕುಗಳಲ್ಲಿ ಸಕ್ರಿಯವಾದ ಜಿಲ್ಲೆ, ಮಹಾನಗರ ಮತ್ತು ತಾಲೂಕು ಸಮಿತಿಗಳ ಮೂಲಕ ಸಕ್ರಿಯವಾದ ಸಂಘಟನಾತ್ಮಕ ಚಟುವಟಿಕೆಗಳ ಜೊತೆಗೆ ಸಮಾಜಕ್ಕೆ ಬಹಳಷ್ಟು ಸೇವೆ ನೀಡುತ್ತ ಬರುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ನ.ಕೃಷ್ಣಪ್ಪ ಅವರ ನಿರ್ದೇಶನದಂತೆ 1989ರಲ್ಲಿ ಮಹಾರಾಷ್ಟ್ರದ ದೊಂಬಿವಿಲಿಯಲ್ಲಿ ಜರಗಿದ ಅಖಿಲ ಭಾರತ ಸಹಕಾರ ಭಾರತಿಯ ಮಹತ್ತರ ಸಭೆಯೊಂದರಲ್ಲಿ ಅಂದಿನ ಹಿರಿಯ ಸಹಕಾರಿಗಳಾದ ಮಂಗಳೂರು ಜನತಾ ಬಜಾರ್‌ನ ಮಾಜಿ ಅಧ್ಯಕ್ಷ ಪುರಂದರ ಭಟ್, ಕ್ಯಾಂಪ್ಕೊದ ನಿರ್ದೇಶಕ ಟಿ.ವಿ.ಭಟ್ ಹಾಗೂ ಅಂದಿನ ಯುವ ಸಹಕಾರಿ ಕೋಂಕೋಡಿ ಪದ್ಮನಾಭ ಇವರು ಕರ್ನಾಟಕದಿಂದ ಪ್ರತಿನಿಧಿಸುವ ಮೂಲಕ ಕರ್ನಾಟಕ ಸಹಕಾರ ಭಾರತಿ ಆರಂಭಕ್ಕೆ ನಾಂದಿ ಹಾಡಿದರು.
ಅಖಿಲ ಭಾರತ ಸಹಕಾರ ಭಾರತಿ ಸ್ಥಾಪನೆಯ ಮಾರ್ಗದರ್ಶಕ ಲಕ್ಷ್ಮಣ ರಾವ್ ಇನಾಂದಾರ್ ಅವರ ಸಹೋದರ ಸಂಘದ ಪ್ರಚಾರಕ ತಾತ್ಯಾರಾವ್ ಇನಾಂದಾರ್ ಅವರು ಸಭೆಯಲ್ಲಿ ಉಪಸ್ಥಿತರಿದ್ದು ಕರ್ನಾಟಕ ಸಹಕಾರ ಭಾರತಿಯ ಆರಂಭಕ್ಕೆ ಶುಭ ಅಡಿಪಾಯ ಹಾಕಿದ್ದರು. ಅಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಬಲವಾಗಿ ಬೇರೂರಿದ್ದು ಹಾಗೂ ಸಂಘ ಪರಿವಾರದ ಚಟುವಟಿಕೆಗಳು ಈ ಭಾಗದಲ್ಲಿ ವಿಶೇಷವಾಗಿ ಪಸರಿಸಿದ ಕಾರಣಕ್ಕಾಗಿ ಮಂಗಳೂರು ಮುಖ್ಯಕೇಂದ್ರವಾಗಿ ಸಹಕಾರ ಭಾರತಿಯ ರಾಜ್ಯದ ಚಟುವಟಿಕೆಗಳು ಆರಂಭವಾಯಿತು. ಮಹಾರಾಷ್ಟ್ರ ಮತ್ತು ಗುಜರಾತಿನ ನಂತರ ಕರ್ನಾಟಕ ಸಹಕಾರ ಭಾರತಿಯ ಹೆಜ್ಜೆಗುರುತಿಗೆ ಮೂರನೇ ರಾಜ್ಯವಾಯಿತು.

1991ರಲ್ಲಿ ಗುಜರಾತ್ ನ ರಾಜಕೋಟ್‌ನಲ್ಲಿ ರಾಷ್ಟ್ರೀಯ ಪ್ರಮುಖರ ಸಂಘಟನಾ ಸಭೆ ಜರಗಿತು. ಆ ಸಭೆಯಲ್ಲಿ ಕರ್ನಾಟಕದಿಂದ ಕೋಂಕೋಡಿ ಪದ್ಮನಾಭ ಭಟ್, ಪುರಂದರ ಭಟ್, ಟಿ.ವಿ.ಭಟ್, ರಾಧಾಕೃಷ್ಣ ಕೋಟೆ, ಪ್ರಮೋದಕುಮಾರ ರೈ, ಕೃಷ್ಣ ನಾಯ್ಕ ಪಾಲ್ಗೊಂಡು ಸಂಘಟನೆಯ ಬಗ್ಗೆ ವಿಶೇಷ ಮಾಹಿತಿ ಕಲೆ ಹಾಕಿದರು. 1990ರ ದಶಕದ ಆರಂಭದಲ್ಲಿ ದ.ಕ. ಜಿಲ್ಲೆ ಮೂಲಕ ರಾಜ್ಯದಲ್ಲಿ ಸಂಘಟನೆಯತ್ತ ತೊಡಗಿದ ಸಹಕಾರ ಭಾರತಿ ದ.ಕ. ಜಿಲ್ಲಾ ಸಂಚಾಲಕರಾಗಿ ಕೋಂಕೋಡಿ ಪದ್ಮನಾಭರವರು ಆಯ್ಕೆಯಾದರು. ಮಂಗಳೂರು ಜನತಾ ಬಜಾರ್‌ ಅಂದಿನ ದಿನಗಳಲ್ಲಿ ಪರಿವಾರ ಸಂಘಟನೆ ಕಾರ್ಯಕರ್ತರ ವಿಶೇಷವಾಗಿ ಕೋಂಕೋಡಿ ಪದ್ಮನಾಭರ ನೇತೃತ್ವದಲ್ಲಿ ಆಧುನೀಕೃತ ದಿನಸಿ ಮಳಿಗೆಯಾಗಿ ರೂಪುಗೊಂಡು ವಿಶೇಷ ಪ್ರಚಾರ ಪಡೆದಿತ್ತು.

90ರ ದಶಕದ ಮಧ್ಯ ಭಾಗದಲ್ಲಿ ಮಣಿಪಾಲ ಸಮೀಪದ ಪರೀಕದಲ್ಲಿ ರಾಷ್ಟ್ರೀಯ ಮಟ್ಟದ ಸಮಾವೇಶ ಜರಗಿ ರಾಷ್ಟ್ರದಲ್ಲಿ ಸಂಘಟನೆ ಬಲಪಡಿಸುವ ಯೋಜನೆಗಳು ರೂಪುಗೊಂಡಿತು. ಕರ್ನಾಟಕ ರಾಜ್ಯ ಸಹಕಾರ ಭಾರತಿಯ ಪ್ರಥಮ ಅಧ್ಯಕ್ಷರಾಗಿ ಮಾಜಿ ಶಾಸಕ, ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷರಾದ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಉರಿಮಜಲು ರಾಮ ಭಟ್ ಅವರು ಕಾರ್ಯನಿರ್ವಹಿಸಿ ಸಹಕಾರ ಭಾರತಿ ಬೆಳವಣಿಗೆಗೆ ನಾಂದಿ ಹಾಡಿದರು. ಆ ಬಳಿಕ ಕೋಂಕೋಡಿಯವರು ರಾಜ್ಯ ಸಂಚಾಲಕರಾಗುವ ಮೂಲಕ ರಾಜ್ಯದಲ್ಲಿ ಸಂಘಟನೆಗೆ ಸಂಚಲನ ಮೂಡಿಸಿದರು. ಜೊತೆಗೆ ಸುಧೀರ್ಘಾವಧಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಈಗಲೂ ಸಹಕಾರ ಭಾರತಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಕರ್ನಾಟಕದ ಕೊಪ್ಪಳದ ರಮೇಶ್ ವೈದ್ಯ ಅವರು ಸಹಕಾರ ಭಾರತಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕಾಲದಲ್ಲಿ 2017ರಲ್ಲಿ ಸಂಸ್ಥಾಪಕರಾದ ದಿವಂಗತ ಲಕ್ಷ್ಮಣ್ ರಾವ್ ಇನಾಂದಾರ್ ಅವರ ಜನ್ಮಶತಮಾನೋತ್ಸವ ಸಮಾರಂಭ ನವದೆಹಲಿಯಲ್ಲಿ ಜರುಗಿದಾಗ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮಕ್ಕೆ ಆಗಮಿಸಿ, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತ ಸಹಕಾರ ಭಾರತೀಯ ಸಂಸ್ಥಾಪಕರಾದ ಲಕ್ಷ್ಮಣ್ ರಾವ್ ಇನಾಂದಾರ್ ಅವರು ಆಗ ಗುಜರಾತಿನ ಸಂಘದ ಪ್ರಚಾರಕರಾಗಿದ್ದು ಬಾಲ ಸ್ವಯಂಸೇವಕನಾಗಿದ್ದ ನನ್ನನ್ನು ಸಂಘದ ಶಾಖೆಗೆ ಕರೆದುಕೊಂಡು ಹೋಗಿ ಸಂಸ್ಕಾರವನ್ನು ನೀಡಿರುವುದನ್ನು ಸ್ಮರಿಸಿದ್ದರು.

ಸಹಕಾರ ಭಾರತಿಯು ಸಂಘಟನಾತ್ಮಕವಾಗಿ, ರಚನಾತ್ಮಕವಾಗಿ, ಆಂದೋಲನಾತ್ಮಕವಾಗಿ ಮತ್ತು ಪ್ರಾತಿನಿಧ್ಯಾತ್ಮಕವಾಗಿ ನಾಲ್ಕು ಆಯಾಮಗಳಲ್ಲಿ ಕ್ರಿಯಾಶೀಲವಾಗಿ ದೇಶದ ಸಹಕಾರ ರಂಗದ ಸುಧಾರಣೆ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಬರುತ್ತಿದೆ.

ಸಹಕಾರ ಭಾರತಿ ದೇಶದ ಸಹಕಾರಿ ಕ್ಷೇತ್ರದ ಸುಧಾರಣೆಗಾಗಿ ಪ್ರಜಾಸತ್ತಾತ್ಮಕವಾಗಿ ಕೈಗೊಂಡಿರುವ ಯಶಸ್ವಿ ಆಂದೋಲನಾತ್ಮಕ ಕಾರ್ಯಗಳು :

1. ನ್ಯಾಯಾಂಗದ ಹೋರಾಟದ ಮೂಲಕ ಸಹಕಾರಿ ಸಂಸ್ಥೆಗಳ ಮೇಲೆ ಹೇರಲಾಗಿದ್ದ 5% ಕಲ್ಯಾಣ ನಿಧಿ ರದ್ಧತಿ : 1959ರ ಸಹಕಾರಿ ಕಾಯ್ದೆಗೆ ತಿದ್ದುಪಡಿ.

2. ನಷ್ಟದಲ್ಲಿದ್ದ ಹೈನುಗಾರಿಕೆಗೆ ಚೈತನ್ಯ ನೀಡಲು ರೈತರು ಹಾಲು ಸೊಸೈಟಿಗಳಿಗೆ ಪೂರೈಸುವ ಹಾಲಿಗೆ ಪ್ರತಿ ಲೀಟರ್ ಗೆ ₹2/-ಪ್ರಪ್ರಥಮವಾಗಿ ಸಹಕಾರ ಭಾರತಿಯಿಂದ ಆಗ್ರಹ. ರಾಜ್ಯ ಸರಕಾರದ ಸ್ಪಂದನೆ.ಪ್ರೋತ್ಸಾಹ ಧನ.. ಇದೀಗ ₹5/-ಕ್ಕೆ ಏರಿಕೆಯಾಗಿದೆ.

3. ಸಿಬ್ಬಂದಿ ನೇಮಕಾತಿಯ ನಿಯಮ 17ರಲ್ಲಿದ್ದ ತೊಡಕಿನ ಅಂಶಗಳ ತಿದ್ದುಪಡಿಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ.. ನಿಯಮಕ್ಕೆ ತಿದ್ದುಪಡಿ ತರಲು ಯಶಸ್ವಿ.

4. ಕೃಷಿ ಪತ್ತಿನ ಸಹಕಾರಿ ಸಂಘಗಳ ಪುನಶ್ಚೇತನಕ್ಕಾಗಿ ಪ್ರೊ. ವೈದ್ಯನಾಥನ್ ಸಮಿತಿ ವರದಿ ಜಾರಿಗೆ ಒತ್ತಾಯ. ಆಂಶಿಕ ಯಶಸ್ಸು.

5. ಮೂರನೇ ವ್ಯಕ್ತಿ (Third Party Cheque) ಚೆಕ್ ನಗದೀಕರಣಕ್ಕಾಗಿ ಸಹಕಾರ ಸಂಸ್ಥೆಗಳಿಗೆ ಆರ್‌ಬಿಐ ಅನುಮತಿ ಕೋರಿ ಆಗ್ರಹಪೂರ್ವಕ ಮನವಿ ಸಲ್ಲಿಕೆ. ₹50,000/- ದವರಗೆ ಚೆಕ್ ನಗದೀಕರಣಕ್ಕೆ ಅನುಮತಿ.

6. ಸಹಕಾರಿ ಸಂಸ್ಥೆಗಳ ಮೂಲಕ ಇ_ಸ್ಟ್ಯಾಂಪಿಂಗ್ ವ್ಯವಸ್ಥೆ ಕಲ್ಪಿಸಲು ಸರಕಾರಕ್ಕೆ ಮನವಿ. ಸಂಪೂರ್ಣ ಯಶಸ್ಸು.

7. ಸಹಕಾರಿ ಸಂಘಗಳ ಆದಾಯವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ನಿರಂತರ ಹೋರಾಟ ಆಂಶಿಕ ಯಶಸ್ಸು.

8. ಡಿಪೋಸಿಟ್ ಇನ್ಸೂರೆನ್ಸ್ ಸ್ಕೀಮ್ (DIGC) ₹1 ಲಕ್ಷದಿಂದ ₹5 ಲಕ್ಷ ಕ್ಕೆ ಹೆಚ್ಚಿಸಲು ಹೋರಾಟ ಯಶಸ್ವಿ.

9. ಕೃಷಿ ಇಲಾಖೆಯ ಜೊತೆಗಿದ್ದ ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕವಾದ ಸಹಕಾರಿ ಇಲಾಖೆ ರಚನೆಗೆ ಆಗ್ರಹ. 2021 ರಲ್ಲಿ ಕೇಂದ್ರ ಸರಕಾರ ಪ್ರತ್ಯೇಕ ಸಹಕಾರಿ ಸಚಿವಾಲಯವನ್ನು ರಚಿಸಿದೆ.

10. ದೇಶದಲ್ಲಿ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪಿಸಲು ದಶಕಗಳಿಂದ ನಿರಂತರ ಆಗ್ರಹಿಸುತ್ತಿದ್ದ ಸಹಕಾರ ಭಾರತಿಯ ಬೇಡಿಕೆಗೆ ತ್ರಿಭುವನ್ ಸಹಕಾರ ವಿಶ್ವವಿದ್ಯಾಲಯ ಸ್ಥಾಪನೆಯ ಮೂಲಕ ಮಹತ್ವದ ಯಶಸ್ಸು ಲಭಿಸಿದೆ.

11. ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997 ಜಾರಿಗೆ ಒತ್ತಾಯ. ದೇಶದಲ್ಲಿ ಪ್ರಪ್ರಥಮವಾಗಿ ಕರ್ನಾಟಕ ರಾಜ್ಯದಲ್ಲಿಯಶಸ್ವಿ ಕರ್ನಾಟಕ ಸೌಹಾರ್ದ ಸಹಕಾರಿ ಸಂಸ್ಥೆಗಳ ಉದಯ.

12. ನೂತನ ಸಹಕಾರ ನೀತಿಗೆ ಒತ್ತಾಯ. ಇದೀಗ ದೇಶದ ಸಹಕಾರಿ ಸಚಿವರಾದ ಅಮಿತ್ ಷಾ ನೇತೃತ್ವದಲ್ಲಿ ನೂತನ ಸಹಕಾರ ನೀತಿಯ ರಚನೆಯ ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರ ಬದಲಾವಣೆಗಳಿಗೆ ನಾಂದಿ.

ಸಹಕಾರ ಭಾರತಿ ನಿರಂತರವಾಗಿ ಸಹಕಾರಿ ಕಾಯಿದೆಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಸರಕಾರದ ಜೊತೆಗೆ ನಿರಂತರ ಸಂಪರ್ಕವನ್ನು ಇಟ್ಟುಕೊಂಡು ಕೆಲವೊಮ್ಮೆ ನ್ಯಾಯಾಂಗ ಹೋರಾಟದ ಮೂಲಕವೂ ಕೂಡ ಯಶಸ್ಸನ್ನು ಪಡೆದಿರುತ್ತದೆ.

ಸಹಕಾರ ಭಾರತಿ ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮುಂದೆ ಇರುವ ಪ್ರಮುಖ ಬೇಡಿಕೆಗಳು.

1. ಕರ್ನಾಟಕ ರಾಜ್ಯ ಸಹಕಾರಿ ಕಾಯ್ದೆ _1959 ಸಮಗ್ರ ಬದಲಾವಣೆಗೆ ಅಗ್ರಹ.

2. ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ಜಿಲ್ಲಾ ಸಹಕಾರಿ ನ್ಯಾಯಾಲಯಗಳ ಸ್ಥಾಪನೆ.

3. ವಿಧಾನ ಪರಿಷತ್ ಮತ್ತು ರಾಜ್ಯಸಭೆಗಳಲ್ಲಿ ಸಹಕಾರಿ ಕ್ಷೇತ್ರದಿಂದ ಪ್ರಾತಿನಿಧ್ಯ.

4. ಪಠ್ಯಪುಸ್ತಕಗಳಲ್ಲಿ ಸಹಕಾರಿ ಕ್ಷೇತ್ರದ ಇತಿಹಾಸ, ಮಹತ್ವ ಮತ್ತು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಮಗ್ರ ಮಾಹಿತಿ ಅಳವಡಿಕೆಗೆ ಒತ್ತಾಯ.

5. ಯುವಜನರನ್ನು ಮತ್ತು ಮಹಿಳೆಯರನ್ನು ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ವಿವಿಧ ಯೋಜನೆಗಳ ಅನುಷ್ಠಾನ.

6. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳಿಗೆ ಅನುಮತಿಸಿರುವ ಸಿಬಿಲ್ ಮತ್ತು ಶೀಘ್ರ ಸಾಲ ವಸೂಲಾತಿಗಾಗಿ ಸೆಕ್ಯೂರಿಟೈಸೇಷನ್ ಕಾಯ್ದೆಯನ್ನು ಸಹಕಾರಿ ಸಂಸ್ಥೆಗಳಿಗೂ ಅಳವಡಿಕೆ ಮಾಡಿಕೊಳ್ಳಲು ಅವಕಾಶ ನೀಡುವುದು.

7. ಸಹಕಾರಿ ಸಂಘಗಳ ತೆರಿಗೆ ನೀತಿಯಲ್ಲಿ ಸ್ಪಷ್ಟತೆ ತರುವುದು.

ಸಹಕಾರ ಭಾರತಿ ಪ್ರತಿ ಮೂರುವರ್ಷಗಳಿಗೊಮ್ಮೆ ರಾಜ್ಯ ಸಮಾವೇಶ ಮತ್ತು ರಾಷ್ಟ್ರೀಯ ಸಮಾವೇಶಗಳನ್ನು ಆಯೋಜಿಸಿ, ಸಹಕಾರಿ ಕ್ಷೇತ್ರದ ಆಗುಹೋಗುಗಳ ಬಗ್ಗೆ ಚರ್ಚಿಸಿ, ಹಲವಾರು ನಿರ್ಣಯಗಳನ್ನು ಕೈಗೊಂಡು ಸರಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಿಕೊಂಡು ಬರುತ್ತಿದೆ.

ಕಳೆದ 46 ವರ್ಷಗಳಲ್ಲಿ ಸಹಕಾರ ಭಾರತಿ ಸಹಕಾರಿ ಕ್ಷೇತ್ರದ ಸುಧಾರಣೆ ಮತ್ತು ಅಭಿವೃದ್ಧಿಯಾಗಿ ನಿರಂತರವಾಗಿ ಕಾರ್ಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದು, ರಾಷ್ಟ್ರೀಯ ಚಿಂತನೆಗಳ ಮೂಲಕ ಸಹಕಾರಿ ಕ್ಷೇತ್ರಕ್ಕೆ ಹೊಸ ಚೈತನ್ಯವನ್ನು ತುಂಬಲು ನಿರಂತರವಾಗಿ ಶ್ರಮಿಸುತ್ತಿದೆ.

ಸಾಣೂರು ನರಸಿಂಹ ಕಾಮತ್,
ರಾಜ್ಯ ಪ್ರಧಾನ ಕಾರ್ಯದರ್ಶಿ, ಸಹಕಾರ ಭಾರತಿ, ಕರ್ನಾಟಕ.

Our Services

Apta Spandana

Cooperatives are considered to be the way to carry forward all sectors of the society towards their collective aim. ISDC...

Know More

Grama Spandana

It is a well known fact that Cooperation is the only way for the upliftment of rural India. Cooperation has...

Know More

Mahila Spandana

WE, at ISDC believe that women were, are and will continue to be the epitome of courage and perseverance. In...

Know More

Vidya Spandana

One of the main objectives of ISDC, as the name itself suggests, is the study and research in the field...

Know More

Sahakara Spandana

Through Sahakara Spandana, ISDC provides support to various types of Cooperative Organisations. ISDC excels at analysing and diagnosing Co-op needs,...

Know More